Sunday, 15 January 2017

ನನ್ನ ಪಿಎಚ್ ಡಿ ಮೌಲ್ಯಮಾಪನ ವರದಿಗಳು.


                ನನ್ನ ಪಿಎಚ್ ಡಿ ಮೌಲ್ಯಮಾಪನ ವರದಿಗಳು.


                   ಈಗ ಹೇಗೋ ಗೊತ್ತಿಲ್ಲ. ನಾನು ಪಿಎಚ್ ಡಿ ಪೂರ್ಣಗೊಳಿಸಿದ ಸಂದರ್ಭದಲ್ಲಿಪುಸ್ತಕ ಪ್ರಕಾಶನಕ್ಕೆ ಅನುಮತಿ ಕೇಳಿದಾಗ ಮೌಲ್ಯಮಾಪನ ವರದಿಗಳನ್ನೂ ಮೈಸೂರು ವಿಶ್ವ ವಿದ್ಯಾಲಯದವರು ನನಗೆ ನೀಡಿದರು. ಒಬ್ಬರು ಮೌಲ್ಯಮಾಪಕರಂತೂ ನನ್ನ ಮಾ್ಗದರ್ಶಕರಾಗಿದ್ದ ಡಾ ಎಡ್ವರ್ಡ್ ನೊರೋನಾ ಅವರೇ. ಹೊರಗಿನ ವಿಶ್ವವಿದ್ಯಾಲಯಗಳಿಂದ ಇನ್ನಿಬ್ಬರು ಕನ್ನಡದ ಖ್ಯಾತ ನಾಮರು: ಒಬ್ಬರು ಹಂಪನಾ ಮತ್ತು ಇನ್ನೊಬ್ಬರು ಪಾ ಶ ಶ್ರೀನಿವಾಸ (ಮದ್ರಾಸು ವಿಶ್ವವಿದ್ಯಾಲಯ).
                       
                     ನೊರೋನಾ ಇವರು ನನಗೆ ಪರಿಶ್ರಮದ ಪ್ರಾಮುಖ್ಯವನ್ನೂ, ಪ್ರಬಂಧದಲ್ಲಿ ವಸ್ತುವನ್ನು ವ್ಯವಸ್ಥಿತವಾಗಿಡುವ ವಿಧಿವಿಧಾನಗಳನ್ನೂ, ಪದ-ವಾಕ್ಯ- ಅಕ್ಷರಗಳು ಹೆಚ್ಚುವರಿಯಾಗಿರದಂತೆ ನೋಡಿಕೊಂಡು ನಿರೂಪಣೆಯನ್ನು ಸಂಕ್ಷಿಪ್ತ ಮತ್ತು ನಿಖರವಾಗಿಸುವ ರೀತಿಗಳನ್ನೂ - ಇಂತಹ ಹಲವಾರು ವಿಷಯಗಳನ್ನು ತಿಳಿಸಿದವರು ಮತ್ತು ನನ್ನ ಕೆಲಸವನ್ನೂ ಮೆಚ್ಚಿಕೊಂಡವರು; ತಮ್ಮ ಅಂತಿಮ ವರದಿಯಲ್ಲಿ ಕೂಡ ಇಂತಹ ಮೆಚ್ಚುಗೆಯನ್ನು ಹರಿಸಿದವರು.

                      ಘಟಾನುಘಟಿಯಾದ ಹಂಪನಾ, ನನ್ನಂತಹ ಕಿರಿಯ ಆರಂಭಿಕನ ಬಗ್ಗೆ ಏನು ಹೇಳಿರಬಹುದೋ ಎಂಬ ಆತಂಕ ಕಾಡುತ್ತಲೇ ಇತ್ತು. ಓದಿದಾಗ ಅವರು ಬರೆಹ ಆಶ್ಚರ್ಯವನ್ನೇ ತಂದಿತ್ತು. ಅವರ ವರದಿಯಲ್ಲಿ ಹೀಗೆ ಬರೆದಿದ್ದಾರೆ: "ಕನ್ನಡ ಭಾಷಾ ಸಾಹಿತ್ಯದ ಸಂದರ್ಭದಲ್ಲಿ ಮಿಶನರಿಗಳ ಪರಿಶ್ರಮ ಮತ್ತು ಕೊಡುಗೆಯನ್ನು ಕೇಂದ್ರ ಪ್ರಜ್ಞೆಯಾಗಿರಿಸಿ ಬಿ ವಿ ಮಹೀದಾಸ ಅವರು ಈ ನಿಬಂಧವನ್ನು ಸಿದ್ಧಪಡಿಸಿದ್ದಾರೆ. ಇದು ಬಹು ಶ್ರಮ ಸಾಧ್ಯವಾದ ಕೆಲಸ. ನಿಬಂಧಕಾರರು ಪಟ್ಟಿರುವ ಪರಿಶ್ರಮದ ಅಗಾಧತೆಯನ್ನು ಈ ಗ್ರಂಥದುದ್ದಕ್ಕೂ ಸಾದ್ಯಂತವಾಗಿ ನೋಡಬಹುದು. ಶ್ರದ್ಧಾಪೂರ್ಣವಾದ ಈ ಕಾಯಕದಲ್ಲಿ ಶಾಸ್ತ್ರಶುದ್ಧಿಯೂ ಇದೆ. ಅಧ್ಯಾಯಗಳ ವಿಂಗಡಣೆ, ಆಯಾ ಅಧ್ಯಾದಲ್ಲಿ ಅಳವಡಿಸಿರುವ ವಿಷಯ ಮತ್ತು ವಿವೇಚನೆ, ಪೂರಕ ಸಾಮಗ್ರಿಯ ಪರಿಷ್ಕಾರ, ಮೂಲ ಆಕರಗಳ ಶೋಧನೆ ಮತ್ತು ಸಮೀಕ್ಷೆ -  ಈ ಎಲ್ಲ ಅಂಶಗಳಲ್ಲೂ ನಿಬಂಧಕಾರರ ಪ್ರಾಮಾಣಿಕತೆ, ಪರಿಶೀಲನಾಪ್ರಜ್ಞೆ, ವಸ್ತುನಿಷ್ಠ ಮತ್ತು ಕೃತಿನಿಷ್ಠ ಅಧ್ಯಯನ ವಿಧಾನಕ್ಕೆ ಬದ್ಧವಾದ ನಿಲುವು - ಇವು ಎದ್ದು ಕಾಣುತ್ತವೆ. ಎಲ್ಲೂ ಗೊಂದಲಗಳಿಗೆ ಅವಕಾಶವಿರದಂತೆ ಪ್ರತಿಯೊಂದು ಅಧ್ಯಾಯವೂ ಅಲ್ಲಲ್ಲಿ ಬರಬೇಕಾದ ಮಾಹಿತಿಗಳನ್ನು ಗರ್ಭೀಕರಿಸಿಕೊಂಡು ತನಗೆ ತಾನು ತನಿಯಾಗಿ ನಿಲ್ಲುವಷ್ಟು ಸಮರ್ಪಕವಾಗಿದೆ. ಒಂದು ಶಾಸ್ತ್ರಕೃತಿಗೆ ಇರಬೇಕಾದ ಅಚ್ಚುಕಟ್ಟಾದ ನಿರಲಂಕೃತ ಶೈಲಿಯಿಂದ ನಿಬಂಧ ಸಂತೋಷ ಕೊಡುತ್ತದೆ. ಕ್ರೈಸ್ತ ಮಿಶನರಿಗಳು, ಎರಡು ಶತಮಾನದ ಕಾಲಘಟ್ಟದಲ್ಲಿ, ಕನ್ನಡ ಭಾಷೆಗೂ ಸಾಹಿತ್ಯಕ್ಕೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಎಷ್ಟೆಷ್ಟು ಬಗೆಯಲ್ಲಿ ಮತ್ತು ಕ್ಷೇತ್ರಗಳಲ್ಲಿ ಮಹದುಪಕರಿಸಿದ್ದಾರೆಂಬುದನ್ನು ಬಿಂಬಿಸಲು ಈ ನಿಬಂಧ ದಿವ್ಯಮಣಿದರ್ಪಣವಾಗಿ ನಿಲ್ಲುತ್ತದೆ. ಒಂದು ನವೀನ ಶೈಕ್ಷಣಿಕ ಶಿಸ್ತನ್ನೂ, ಹೊಸ ಪರಿಭಾಷೆಯನ್ನೂ, ಮುಖ್ಯವಾಗಿ ಹಳಗನ್ನಡ ಕೃತಿಗಳ ಅನುಸಂಧಾನ ಕ್ರಮವನ್ನು ಸುವ್ಯವಸ್ಥಿತವಾಗಿ ಸಂಯೋಜಿಸಿ ಮುಂದೆ ಬರೆಯಬೇಕಾಗಿದ್ದ ಸಾಹಿತ್ಯಚರಿತ್ರಗೆ ತಕ್ಕ ಭೂಮಿಕೆಯನ್ನು ಸಿದ್ಧಪಡಿಸಿಕೊಟ್ಟವರು ಕ್ರೈಸ್ತಮಿಶನರಿಗಳೆಂಬುದನ್ನು ಈ ನಿಬಂಧವು ಘನತರವಾಗಿ ಖಚಿತಪಡಿಸಿದೆ. ಇದು, ವಿದ್ವತ್ಕಾರ್ಯ ತಾಳ್ಮೆಯ ಹಾಗೂ ನಿರಂತರ ದುಡಿಮೆಯ ಸಾರವಾಗಿ ಬಂದಿರುವ ನಿಬಂಧ. ನಿಜಕ್ಕೂ ಶಬ್ದದ ಪೂರ್ಣಾರ್ಥದಲ್ಲಿ ಇದು ಉತ್ತಮ ಮಟ್ಟದ 'ಸಂಶೋಧನ' ಗ್ರಂಥ".
                      ಸನ್ಮಾನ್ಯರ ಈ ಮಾತಗಳು ನನಗೂ ನನ್ನ ಮಾರ್ಗದರ್ಶಕರಾದ ನೊರೋನಾರಿಗೂ ಹೊಗಳಿಕೆಯ ಉಡುಗೊರೆಗಳೇ ಸರಿ!. ನನ್ನ ನಿಬಂಧದಲ್ಲಿ ಹಂಪನಾ ಇವರು ಹೇಳಿದ ಗುಣಗಳೆಲ್ಲ ಸೇರುವಂತೆ ಮಾಡಿದವರು ನೊರೋನಾ ಇವರಲ್ಲದೆ ಬೇರಾರು? ಹೀಗೆ ಸಮನ್ವಯಗೊಳಿಸಿ ಇಬ್ಬರನ್ನೂ ಉತ್ತಮ ಕೆಲಸಕ್ಕೆ ಪ್ರೇರಿಸುವ ಕಲಾಗಾರಿಕೆಯನ್ನು ಕಂಡು ಬೆರಗಾಗುತ್ತದೆ. ನನ್ನಂತೂ ನಾಗರಾಜಯ್ಯನವರ ಮಾತುಗಳು ಇಂದಿಗೂ ಉಬ್ಬಿಸುತ್ತವೆ. ಶೈಕ್ಷಣಿಕ ಆಡಳಿತದ ನಡುವೆ ಶಿಕ್ಷಣ ಮತ್ತು ಶಾಸ್ತ್ರ ಸಾಹಿತ್ಯದಲ್ಲಿ ಅಲ್ಪವಾದರೂ ಕೃಷಿ ಮಾಡಲು ಪ್ರೇರಿಸಿದವು ಇಂತಹ ಮಾತುಗಳೇ!.

                      ಪಾ ಶ ಶ್ರೀನಿವಾಸರು ನನ್ನ ನಿಬಂಧವನ್ನು ವಿವರವಾಗಿ ಪರಿಶೀಲಿಸಿ ದಾಖಲಿಸಿದ್ದಾರೆ. ಗುಣಾವಗುಣಗಳನ್ನು ಚರ್ಚಿಸಿದ್ದಾರೆ. "ಪಾಶ್ಚಾತ್ಯ ಮಿಶನರಿಗಳ ಕೆಲಸವನ್ನು ಪರಿಚಯ ಮಾಡಿಕೊಡುವ ಹಲವಾರು ಗ್ರಂಥಗಳು ರಚನೆಯಾಗಿದ್ದರೂ ವರ್ಣನಾತ್ಮಕ ಮತ್ತು ಚಾರಿತ್ರಿಕ ದೃಷ್ಟಿಯಿಂದ, ವಸ್ತುನಿಷ್ಠವಾಗಿ ಇಷ್ಟೊಂದು ವಿವರವಾಗಿ ಪರಿಚಯಿಸುವ ಕೃತಿ ಹೊರಬಂದಿರುವುದು ಇದೇ ಮೊದಲು. ಅದರಲ್ಲೂ ಶಾಸ್ತ್ರ ಕೃತಿಗಳ ರಚನೆಯಲ್ಲಿ ಅವರು ತೋರಿರುವ ಅನುಪಮ ಕೌಶಲವನ್ನೂ, ಪ್ರಾಯೋಗಿಕ ವಿಮರ್ಶೆಯ ರೂಪದಲ್ಲಿ [ಬಿಡಿಸಿಬಿಡಿಸಿ] ಪರಿಚಯಿಸಿರುವ, ನಿಬಂಧಕಾರರ ಶ್ರಮದಿಂದ ಕೂಡಿದ ಈ ಕಾರ್ಯ ಶ್ಲಘನೀಯವಾಗಿದೆ. ಇಷ್ಟೊಂದು ದೀರ್ಘವಾದ, ವಿಸ್ತಾರವಾದ, ನಿಬಂಧದಲ್ಲಿಹೆಚ್ಚಾಗಿ, ಬೆರಳಚ್ಚಿನ ದೋಷಗಳಾಗಲೀ ಪದವಾಕ್ಯ ದೋಷಗಳಾಗಲೀ ನುಸುಳದಿರುವುದು ಮೆಚ್ಚತಕ್ಕ ಅಂಶ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

                         ಈ ಮೂರೂ ಮಹನೀಯರುಗಳು ನನ್ನ ಸಾಹಿತ್ಯಾಭಿವ್ಯಕ್ತಿಗೆ ಪ್ರೇರಣೆ ನೀಡಿದವು; ಅಭಿವ್ಯಕ್ತಿಯನ್ನು ಮೊನಚುಗೊಳಿಸಿದವು; ಅನಾವಶ್ಯಕ ಪದಗಳಿಲ್ಲದಂತೆ ಅರ್ಥಪೂರ್ಣ ಬರಹಕ್ಕೆ ನನ್ನನ್ನು ನೂಕಿದವು. ಈ ವಿಚಾರಗಳಲ್ಲಿ ನನಗೆ ವ್ಯಕ್ತಿತ್ವವೊಂದು ಒದಗಿ ಬಂದುದು ಇವರಿಂದಿಲೇ ಅಲ್ಲವೇ?

                      

No comments:

Post a Comment