Tuesday, 15 December 2015

ಪ್ರೀತಿಯ ಎಡ್ವರ್ಡ್ ನೊರೋನ್ಹಾ



                                                    ಪ್ರೀತಿಯ ಎಡ್ವರ್ಡ್ ನೊರೋನ್ಹಾ

                             ಏಕೋ ಈ ದಿನ ನೊರೋನ್ಹಾರ ನೆನಪು ತುಂಬ ಬಂತು. ಮಂಗಳೂರಿನ ಮಂಗಳಗಂಗೋತ್ರಿಯಲ್ಲಿ ನಾನು ಎಮ್ ಎ ಮಾಡುತ್ತಿದ್ದಾಗ ಎಡ್ವರ್ಡ್ ನೊರೋನ್ಹಾ ನನ್ನ ಸಹಪಾಠಿ. ನನಗಿಂತ ಆರು ವರ್ಷ ಹಿರಿಯರಾದರೂ ಉತ್ತಮ ಗೆಳೆಯ. ನಾನು ತುಂಬ ಸಂಪ್ರದಾಯಸ್ಥ ಬ್ರಾಹ್ಮಣ, ಅವರು ತುಂಬ ಸಂಪ್ರದಾಯಸ್ಥ ಕಥೋಲಿಕ. ಜೆಸೂಯಿಟ್ ಬ್ರದರ್ ಆಗಿದ್ದವರು. ನನ್ನ ವಾಸ್ತವ್ಯ ಮಂಗಳಾದೇವಿ ದೇವಸ್ಥಾನದ ಹಿಂದೆ ಇದ್ದ (ಈಗ ಪಾಯಿಂಗ್ ಗೆಸ್ಟ್ ಎನ್ನುವಂತಹ) ಮನೆಯಲ್ಲಿ, ಅವರದು ಸಂತ ಅಲಾಯ್ಶಿಯಸ್ ಚರ್ಚಿನಲ್ಲಿ. ನಾವು ಅಜಂತ, ಎಲ್ಲೋರಾ, ಮುಂಬೈಗಳಿಗೆ ಶೈಕ್ಷಣಿಕಪ್ರವಾಸ ಹೋದಾಗಲೂ ನಾವು ನಿಕಟ ಜೊತೆಗಾರರು. 1974ರಲ್ಲಿ ಬಹುಶಃ ನಾವು ಒಟ್ಟೊಟ್ಟಿಗೆ ಕೆಲಸ ಸೇರಿದೆವು. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇರಿದರು, ನಾನು ರಾಯಚೂರು ತಾಲ್ಲೂಕಿನ ಇಡಪನೂರಿನಲ್ಲಿ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯನಾಗಿ. ಅನಂತರ ನನ್ನುನ್ನು ಪಿ ಎಚ್ಡಿ ಮಾಡಲು ಪ್ರೇರೇಪಿಸಿದವರೂ ಅವರೇ, ಮಾರ್ಗದರ್ಶಿಸಿದವರೂ ಅವರೇ. ಶಾಸ್ತ್ರೀಯ ಪ್ರಬಂಧವೊಂದನ್ನು ಬರೆಯುವ ಕೌಶಲವನ್ನು ನಾನು ಅವರಿಂದ ಕಲಿತೆ. ನಾನು ಕನ್ಮನಡಕ್ಕೆ ಗೀತಾಂಜಲಿಯನ್ನು ಭಾಷಾಂತಿರಿಸಿದಾಗ ತುಂಬ ಒಳ್ಳೆಯ ಮಾತುಗಳಿಂದ ಪ್ರೋತ್ಸಾಹಿಸಿದವರು, ಅದಕ್ಕೆ ಮುನ್ನುಡಿಯ ತೋರಣ ಬರೆದವರು. ಮಹತ್ವಾಕಾಂಕ್ಷಿ.  ಸಜ್ಜನ. ದಾರ್ಮಿಕ ಮನೋಭಾವದ ವ್ಯಕ್ತಿ. ನಿವೃತ್ತಿಯನಂತರ ಕೊಂಕಣಿ ಪ್ರಾಜಕ್ಟೊಂದಕ್ಕಾಗಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಂಬಂಧ ಒಂದು ಸಲ ಮಂಗಳೂರಿನಿಂದ ಮೈಸೂರಿಗೆ ಹಿಂದಿರುಗುತ್ತಿದ್ದಾಗ ಆಕಸ್ಮಿಕವಾಗಿ ಇಹಲೋಕ ತ್ಯಜಿಸಿದರು. ಅಕ್ಟೋಬರ್ 8, 2009ರಂದು ನಿಧನ.

Friday, 11 December 2015

ಎಸ್ ಎಲ್ ಭೈರಪ್ಪನವರ ತಂತುವನ್ನು ನಾನೂ ಓದಿದೆ


                                  ಎಸ್ ಎಲ್ ಭೈರಪ್ಪನವರ ತಂತುವನ್ನು ನಾನೂ ಓದಿದೆ

                      ವೇದಪ್ರಕಾಶ ಎಸ್ ಎಲ್ ಭೂರಪ್ಪನವರ ತಂತುವನ್ನು ತಂದು ಕೊಟ್ಟಿದ್ದರು. ಓದಿದೆ. ಈ ತಂತುವಿಗೆ ಹಲವು ಎಳೆಗಳು, ಹಲವು ಆಯಾಮಗಳು. ಇದರಲ್ಲಿ ಬಂದಿರುವುದು  ಮುಖ್ಯವಾಗಿ ಮೂರು ವಸ್ತುಗಳು. ಶಿಕ್ಷಣ, ಭ್ರಷ್ಟಾಚಾರ ಮತ್ತು ಲೈಂಗಿಕ ಸಂಬಂಧಗಳು. ಈ ಮೂರು ಎಳೆಗಳನ್ನು ಹೆಣೆದು ಸಿದ್ಧವಾಗಿದೆ ತಂತುವಿನ ಹರಹು. ಬಿಡಿಬಿಡಿಯಾಗಿಟ್ಟುಕೊಂಡರೆ ರಾಜಕೀಯ ಸಂಗೀತಗಳೂ ಸೇರಿ ಸಿತಾರ್ ಸಿದ್ಧವಾಗುತ್ತದೆ.
                     ಒಂದು ದಶಕದ ಅವಧಿಯಲ್ಲಿ ಈ ಕ್ಷೇತ್ರಗಳಲ್ಲಾದ ಬದಲಾವಣೆಗಳು ಇಲ್ಲಿ ಸುಂದರವಾಗಿ ಚಿತ್ರಿತವಾಗಿವೆ. ಭ್ರಷ್ಟಾಚಾರದ ದಾವೆಯೊಂದರಲ್ಲಿಅಲಹಾಬಾದ್ ನ್ಯಾಯಾಲಯವು ಶ್ರೀಮತಿ ಇಂದಿರಾಗಾಂಧಿಯವರನ್ನು ತಪ್ಪಿತಸ್ಥರೆಂದು ನಿರ್ಣಯಿಸಿ ಅವರನ್ನು ಲೋಕಸಭಾಸ್ಥಾನದಿಂದ ಹೊರಹಾಕಿದ್ದು ಕಾದಂಬರಿಯಲ್ಲಿ ಬರುವುದರಿಂದ ಕಥೆಗೆ ಒಂದು ರೀತಿಯ ಅಥೆಂಟಿಸಿಟಿ ಬಂದಿದೆ. ಅಭಿವೃದ್ಧಿ-ವಿಕಾಸಗಳೆಂಬ ಓಟದಲ್ಲಿ ನಾವು ಏನನ್ನು ಕಳೆದುಕೊಂಡಿದ್ದೇವೆ ಏನನ್ನು ಗಳಿಸಿದ್ದೇವೆ ಎಂಬ ಚಿತ್ರಗಳೂ ಇಲ್ಲಿ ಮನಂಬುಗುತ್ತವೆ.
                           ವಿದ್ಯಾರ್ಥಿಗಳೇ ಮಣ್ಣಿನಿಂದ ಕಟ್ಟಿದ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲೆ ಹೊಸ ರೀತಿಯ ಶಿಲ್ವನ್ನ ಅಳವಡಿಸಿಕೊಂಡು, ಹೊಸ ಗಟ್ಟಿ ಸಾಮಗ್ರಿಗಳಿಂದ ವೈಭವಯುತವಾಗಿ ಮಾರ್ಪಡುತ್ತದೆ.ಆ  ಹಳ್ಳಿಯ ಮಕ್ಕಳೇ ಸೇರಿ ಕಲಿಯುತ್ತಿದ್ದ ತರಗತಿಗಳಲ್ಲಿ ಭಾರತಾದ್ಯಂತದಿಂದ ಶ್ರೀಮಂತ ಕುಟುಂಬಗಳ ಮಕ್ಕಳು ಬಂದು ಸೇರುತ್ತಾರೆ. ಬಯಸುವ ಅಧ್ಯಾಪಕರಿಗೆ ಕೈತುಂಬ ಸಂಬಳ ದರಕುತ್ತದೆ. ಪಾರಂಪರಿಕ ನೀತಿಯ ಚೌಕಟ್ಟು, ಪರಿಶ್ರಮದ ಬೆಲೆ, ಒಟ್ಟಾಗಿ ಇದ್ದುದನ್ನೇ ಹಂಚಿಕೊಂಡು ತಿನ್ನುವ ಸಮುದಾಯ ಭಾವ ಕ:ಳೆದು ಹೋಗುತ್ತವೆ. ಹೊಸ ರಾಜಕೀಯ ವ್ಯವಸ್ಥೆ, ನಾಯಕರಿಗೆ ಸೌಲಭ್ಯ ಗಳ ಸುರಿಮಳೆ ಇರುವ ಜೀವನ, ಅಂತಹವರಿಗೆ ಉದ್ದಾಮತೆಯ ಹೆಸರು ಎಲ್ಲ ಸಿಗುತ್ತವೆ. ಕಷ್ಟಪಟ್ಟು ದುಡಿದೇ ತಿನ್ಬೇಕೆಂಬ ಛಲ. ಇನ್ನೊಬ್ಬರನ್ನು ಶೋಷಿಸಬಾರದೆಂಬ ವ್ರತ, ಸಮಾಜಕ್ಕಾಗಿ ತನ್ನ ದುಡಿಮೆಯೆಲ್ಲವನ್ನಾದರೂ ನೀಡಿ ಸಹವರ್ತಿಗಳ ಬಾಳು ಹಸನಾಗುವಂತೆ ಮಾಡಬೇಕೆಂಬ ಕಳಕಳಿ ನಷ್ಟವಾಗಿದೆ. ಲೈಂಗಿಕತೆಯೂ ಇತರ ಆವಶ್ಯಕತೆಗಳಂತೆಯೇ ಇನ್ನೊಂದು ಆವಶ್ಯಕತೆ ಎಂದು ಭಾವಿಸಿ ಸ್ವಚ್ಛಂದ ಲೈಂಗಿಕ ಸಂಬಂಧಗಳ ಹೊಸ ಜೀವನ ಪ್ರಾರಂಭವಾಗುತ್ತದೆ. ಮನೋನೆಮ್ಮದಿ, ಕೌಟುಂಬಿಕ ಸಂತೋಷ ಮತ್ತು ಮುಂದಿನ ಪೀಲೀಗೆಗೆ ಕುಟುಂಬವ್ಯವಹಾರಗಳ ನೆಲೆಗಟ್ಟು ಇಲ್ಲವಾಗುತ್ತದೆ.
                                 ಮೇಲನವುಗಳನ್ನೆಲ್ಲ ಒಂದೊಂದೇ ಪಾತ್ರದಲ್ಲಿ ಗುರತಿಸಿಯೂ ಕಾಣಬಹುದು ಒಟ್ಟಾಗಿ ಕಾದಂಬರಿಯಲ್ಲಿ ವಿವಿಧ ಪಾತ್ರಗಳ  ಒಡನಾಟದಲ್ಲಿಯೂ ಗುರುತಿಸಬಹುದು. ಇದು ಕಾದಂಬರಿಯ ವೈಶಿಷ್ಟ್ಯ.

ಅಭಿನವಗುಪ್ತನ ಗೀತಾರ್ಥಸಂಗ್ರಹ



                                           ಅಭಿನವಗುಪ್ತನ ಗೀತಾರ್ಥಸಂಗ್ರಹ

                    ನಾವು ಎಮ್ ಎ ಓದುತ್ತಿದ್ದಾಗ ಅಭಿನವಗುಪ್ತನ ಹೆಸರನ್ನು ನಾವು ಭಾರತೀಯ ಕಾವ್ಯ ಮೀಮಾಂಸೆಯ ಸಂದರ್ಭದಲ್ಲಿ ಓದುತ್ತಿದ್ದೆವು. ಧ್ವನಿಪ್ರಸ್ಥಾನದ ಪ್ರಮುಖ ವಿದ್ವಾಂಸನಾಗಿ ನಮಗೆ ಈತನ ಪರಿಚಯ. ಆನಂದ  ವರ್ಧನ ಧ್ವನಿಯ ಬಗ್ಗೆ ಶಕ್ತವಾಗಿ ಪ್ರತಿಪಾದಿಸಿರಬಹುದು. "ಕಾವ್ಯಸ್ಯಾತ್ಮಾ ಧ್ವನಿಃ" ಎಂದು ಮುಕ್ತವಾಗಿ ಘೋಷಿಸಿರಬಹುದು. ಆದರೆ ಧ್ವನಿಪ್ರಸ್ಥಾನಕ್ಕೆ ಗಟ್ಟಿ ನೆಲೆ ದೊರಕಿದ್ದು ಅಭಿನವಗುಪ್ತನ ವ್ಯಾಖ್ಯಾನ ಧ್ವನ್ಯಾಲೋಕಲೋಚನದಿಂದ. ಹಾಗೆಂದು ನಮ್ಮ ಪ್ರೊಫೆಸರರು ಹೇಳಿದ್ದು ನೆನಪಾಗುತ್ತದೆ. ಅವನು ಕಾಶ್ಮೀರಿ ಎಂದೂ ಅದ್ವೈತಾನುಭವದ ವ್ಯಕ್ತಿಯೆಂದೂ ಹೇಳಿದ್ದರು.
                   ಇವನು ಭಗವದ್ಗೀತೆಗೆ ಒಂದು ವ್ಯಾಖ್ಯಾನ ಬರೆದಿರುವನೆಂಬುದು 'ಚಿಂತನ ಬಯಲು'ವಿನಲ್ಲಿ ಶ್ರೀ ಚೈತನ್ಯ ಎಂಬುವರು ಬರೆದ ಲೇಖನದಿಂದ ತಿಳಿಯಿತು. ಅಥವ ನೆನಪು ಮರುಕಳಿಸಿತೆ? ತಾವಲ್ಲ ಇಂದ್ರಿಯಗಳು ಅನುಭವಿಸುವುವು ಎಂಬ ಅನುಸಂಧಾನದಿಂದ ಆಯಾ ಕರಣಗಳ ಅಭೀಪ್ಸೆಗಳನ್ನು ಪೂರೈಸಲು ಬಿಡುವುದರಿಂದ  ಕರಣದೇವತೆಗಳು ತೃಪ್ತರಾಗುವರು. ಇದರಿಂದ ಇಂತಹ ಆಸಗಳಿಂದ ಆತ್ಮ ಮುಕ್ತನಾಗುವನು. " by abandoning nothing will happen, by enjoying everything will happen. Enjoying you will be detached". ಇದೊಂದು ವಿಭಿನ್ನವಾದ ಅರ್ಥೈಸುವ ವಿಧಾನವಾಗಿದೆ.
                       ಕೊನೆಯಲ್ಲಿ ಸಂಗ್ರಹ ರೂಪವಾಗಿ ಹದಿನೆಂಟು ಅಧ್ಯಾಯಗಳನ್ನು ಹದಿನೆಂಟು ಶ್ಲೋಕಗಳಲ್ಲಿ ಸಂಕ್ಷೇಪಗೊಳಿಸಿಕೊಟ್ಟಿರುವುದು ಗೀತಾರ್ಥವನ್ನು ಅನುದಿನ ಮನ ಮಾಡಿಕಳ್ಳಬೇಕೆನ್ನುವವರಿಗೆ ತುಂಬ ಅನುಕೂಲಕರವಾದ ಸುಧಾರಣೆ.