Thursday 20 January 2022

ನಮ್ಮೆಲ್ಲರ ಪ್ರೀತಿಪಾತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗ ಗೆಳೆಯ ಓಂಕಾರನ ಬರಹ

 

ಓಂಕಾರ ಹೇಳುತ್ತಾರೆ

"ಧಾರ್ಮಿಕವಾಗಿ ಮೋದಿ ಬಗ್ಗೆ ಹೇಳುವುದಾದರೆ, ಅವನೊಬ್ಬ ದೇಶಭಕ್ತ. ದೇಶವನ್ನು ಕಾಪಾಡಲು ಬಂದ ಸತ್ಪುರುಷ. ಮೋದಿಯಂತೆ ಇರುವವರು ಮೋದಿಯೊಬ್ಬನೆ. ಅವನಂತೆ ಬೇರೆ ಯಾರೂ ಇರಲಾರರು. ಅವನಲ್ಲಿ ಶಾಸ್ತ್ರದಲ್ಲಿ ಹೇಳಿದ ಬಹುತೇಕ ಸಾತ್ವಿಕ ಗುಣಗಳು ಇವೆ. ಇಂಥವರು ಇರಲು ಹೇಗೆ ಸಾಧ್ಯ ? ಸ್ವಲ್ಪು ವಿವೇಚನೆ ಮಾಡಬೇಕು. ಇಂಥ ಶ್ರೇಷ್ಠತೆ ಮೋದಿಯಲ್ಲಿ ಬರಲು ಏನು ಕಾರಣವಿರಬಹುದು ?

ಕಲಿಯುಗದಲ್ಲಿ ಭಗವಂತನ ಅವತಾರವಿಲ್ಲ. ಆದರೆ ದೇಶಕ್ಕೆ ಆಪತ್ತು ಬಂದಾಗ ಭಗವಂತನು ಯಾವ ದೇವತೆಗಳನ್ನಾದರೂ ಕಳಿಸಬಹುದು. ನಮ್ಮ ಸಿಧ್ಧಾಂತ ಉಳಿಯಲು ವಾಯುದೇವರ ರೂಪದಲ್ಲಿ ಶ್ರೀಮದಾಚಾರ್ಯರು ಅವತಾರ ಮಾಡಲಿಲ್ಲವೇ ? 

ಹಾಗೆ ಮೋದಿಯಲ್ಲಿ ಯಾವದಾದರೂ ದೇವತೆಗಳ ಆವೇಶ ಬೇಕು. ಇಲ್ಲದಿದ್ದರೆ ಇಷ್ಟು ಪ್ರಸಿಧ್ಧಿ ಬರಲು ಹೇಗೆ ಸಾಧ್ಯ. ಇದರ ಹಿಂದೆ ಮುಖ್ಯವಾದದ್ದು ಅವರಲ್ಲಿರುವ ಭಗವಂತನ ವಿಭೂತಿ ರೂಪ. ಆ ದೇವತೆಯದ್ವಾರಾ ಭಗವಂತನ ಸನ್ನಿಧಾನ ಅಲ್ಲಗಳಿಯುವಂತಿಲ್ಲ. ಮೋದಿಯ ಶರೀರದಲ್ಲಿ ದೇವತೆಯ ಆವೇಶ ಹಾಗೂ ಭಗವಂತನ ವಿಶೇಷ ಸಾನಿಧ್ಯ ಇರಲೇಬೇಕು.

ವಿಭೂತಿ ಸಂಧಿಯಲ್ಲಿ ದಾಸರು ಸ್ಪಷ್ಟವಾಗಿ ಹೇಳಿದ್ದಾರೆ. ಅರ್ಜುನನಿಗೆ ಸಾಕ್ಷಾತ್ ಶ್ರೀಕೃಷ್ಣನೇ ಉಪದೇಶಕನಾಗಿ  ದೇಶವನ್ನು ಗೆಲ್ಲಲು ಸಾಧ್ಯವಾಗಲಿಲ್ಲವೆ ? 

ಭಗವಂತನ ಸನ್ನಿಧಾನದಿಂದಲೇ ಮೋದಿಗೆ ಇಂಥ ಶ್ರೇಷ್ಠತೆ ಬಂದಿರಲೇಬೇಕು. ಇದು ನಮ್ಮ ಸೌಭಾಗ್ಯ. ರಾಜರಲ್ಲಿ ಭಗವಂತನು ಇಂಥ ಶಕ್ತಿ ಕೊಟ್ಟಿರುತ್ತಾನೆ. ನಮ್ಮ ದೇಶವನ್ನು ಆಳುವ ರಾಜನು ಅವನೇ ಆಗಿದ್ದಾನೆ.  ನಾವೆಲ್ಲರೂ ರಾಜನಿಗೆ ವಿಶೇಷ ಶಕ್ತಿ ಕೊಟ್ಟು ದೇಶವನ್ನು  ಕಾಪಾಡಲಿ ಎಂದು ದೇವರಲ್ಲಿ ಕಿಂಚಿತ್ ಪ್ರಾರ್ಥಿಸೋಣ".


ನನ್ನ ಅಮ್ಮ

 

                                        ನನ್ನ ಅಮ್ಮ

        ಅಮ್ಮ ಎಂದೊಡನೆ ಹೊತ್ತು ಹೆತ್ತು ಸಾಕಿ ಸಂಸ್ಕಾರ ಕೊಟ್ಟವರೆಂಬ ಪೂಜ್ಯ ಭಾವ ಎಲ್ಲರಿಗೂ ಬಂದುಬಿಡುತ್ತದೆ. ಕೆಲವು ಅನುಭವಗಳಿಂದ ,ಕೆಲವು ಓದಿನಿಂದ  ಮತ್ತೆ ಕೆಲವು ಅಪ್ಪ ದೊಡ್ಡಪ್ಪ ಮಾವ ಇಂತಹವರು ಹೇಳಿದ್ದರಿಂದ ಈ ಭಾವ ಬೆಳೆದು ಬರುತ್ತದೆ. ಪ್ರಪಂಚದ ಎಲ್ಲ ಸಂಸ್ಕೃತಿಗಳಲ್ಲಿ ತಾಯಿಗೆ ಹೀಗೆ ಮಹತ್ವದ ಸ್ಥಾನ ಪೂಜ್ಯ ಭಾವ ಇರುವುದು ಸಹಜ.

        ನನ್ನ ಅಮ್ಮ  ನನಗೇನು ಮಾಡಿದರು? ಇದೆಂತಹ ಪ್ರಶ್ನೆ ಕೇಳಿಕೊಳ್ಳುತ್ತಿದ್ದೇನೆ. ಅಮ್ಮ ನನ್ನನ್ನು ಅವರು ಹೋದಲ್ಲೆಲ್ಲ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು.  ಪಕ್ಕದ ಸೀತೂರಿಗೆ, ಹತ್ತಿರದ ಶೃಂಗೇರಿಗೆ, ಅಜ್ಜಿಮನೆ ಗಾಜನೂರಿಗೆ ಹೀಗೆ ಹಲವು ಕಡೆ. ಆದರೆ ಅಲ್ಲಿಗೆಲ್ಲ ಅಮ್ಮನನ್ನು ನಾನು ಕರೆದುಕೊಂಡು ಹೋಗುತ್ತಿದ್ದೆನೆಂದೇ ಲೆಕ್ಕ. ಏಕೆಂದರೆ ನಾನು ಗಂಡಲ್ಲವೆ? ಹೋದಲ್ಲೆಲ್ಲ ನಾನು ಖುಶಿಯಾಗಿರುವಂತೆ ಅಮ್ಮ ನೋಡಿಕೊಳ್ಳುತ್ತಿದ್ದಳು.

        ಇಂತಹವೆಲ್ಲ ಬಿಡಿ ಎಲ್ಲ    ತಾಯಂದಿರೂ ಮಾಡುವುದೇ. ವಿಶೇಷವಾದ ಸಂದರ್ಭವೊಂದಿದೆ . ಹಲವು ಇವೆ ಆದರೆ ಈಗ ಪ್ರಸ್ತುತವಾಗಿರುವುದೊಂದು. ನಾನು ಕೊಪ್ಪದ ಪ್ರೌಢ ಶಾಲೆಗೆ ಹೋಗುತ್ತಿದ್ದ ದಿನಗಳು. ನಮ್ಮ ಶಾಲೆ ಪಿ ಯು ಕಾಲೇಜಾಗಿ ಉನ್ನತಿ ಹೊಂದಿತು. ಸ್ಥಳಾವಕಾಶ ಕಡಿಮೆ ಎಂದು ನಮಗೆ ಶಿಫ್ಟ್‌ ಕ್ಲಾಸುಗಳು ಪ್ರಾರಂಭವಾದುವು. ಪ್ರೌಢ ಶಾಲಾವಿಭಾಗಕ್ಕೆ ಬೆಳಗಿನ ಶಿಫ್ಟ್.‌ ಪಿ ಯು ವಿಭಾಗಕ್ಕೆ ಮಧ್ಯಾಹ್ನ. ಬೆಳಿಗ್ಗೆ ಏಳುವರೆ ಘಂಟೆಗೆ ಶಾಲೆಯಲ್ಲಿರಬೇಕಾಗಿತ್ತು. ಆಗ ಕೊಪ್ಪಕ್ಕೆ ಅಷ್ಟು ಹೊತ್ತಿಗೆ ಹೋಗುವಂತಹ ಬಸ್ಸಿರಲಿಲ್ಲ, ಆರು ಘಂಟೆಗೆ  ಮೊದಲೇ ಹೊರಟು ನಡೆದುಕೊಂಡೇ ಹೋಗಬೇಕಾಗಿತ್ತು. ಬೆಳಗಿನ ತಿಂಡಿ ಏನು?  ಹಿಂದಿನ ದಿನ ರಾತ್ರಿ ಸ್ವಲ್ಪ ಅನ್ನ ಉಳಿಸಿ, ಬೆಳಿಗ್ಗೆ ಅದನ್ನು ಬಿಸಿ ಮೊಸರನ್ನ ಮಾಡಿ ಕೊಡುತ್ತಿದ್ದಳು. ಒಂದು ದೊಡ್ಡ ಸೌಟನ್ನು ಒಲೆಯ ಉರಿಯಲ್ಲಿ ಕೆಂಪಗೆ ಕಾಯಿಸಿ ಅದಕ್ಕೆ ಸ್ವಲ್ಪ ಬೆಣ್ಣೆ ಹಾಕುವುದು ಅನಂತರ ಕಲಸಿದ ಮೊಸರನ್ನವನ್ನ ಅದಕ್ಕೆ ಹಾಕಿ ಮತ್ತೊಮ್ಮೆ ಕಲಸುವುದು - ಹೀಗೆ ಸಿದ್ಧವಾಗುತ್ತುತ್ತು ರುಚಿಯಾದ ಬಿಸಿ ಮೊಸರನ್ನ. ಬೆಳಿಗ್ಗೆ ಎದ್ದಾಗ ಚಳಿ ಚಳಿ ಎನಿಸಿದಾಗಲೂ ಸ್ನಾನ ಮುಗಿಸಿ ಈ ಅದ್ಭುತ ತಿಂಡಿಯನ್ನುತಿಂದರೆ ಆಹ್ಲಾದವಾಗುತ್ತಿತ್ತು. ನನಗೆ ಆಗ ಉದ್ದ ಕೂದಲಿತ್ತು. ನನಗೆ ಚೌಲ ಮಾಡಿರಲಿಲ್ಲವಾದ್ದರಿಂದ ‌. ಕೂದಲನ್ನು ಬಾಚಿ ಹಿಂಬದಿಯಲ್ಲಿ ಗಂಟುಹಾಕುತ್ತಿದ್ದಳು. ಒಗೆದ ಬಟ್ಟೆ ತೊಡಲು ಕೊಡುತ್ತಿದ್ದಳು.......

        ಅನಂತರ ಅಪ್ಪನ ಕೆಲಸ. ನಾನು ಮನೆಯಿಂದ ಐದುವರೆಗೆ ಹೊರಡುತ್ತಿದ್ದೆ. ಆಗಿನ್ನೂ ಪೂರ್ಣ ಬೆಳಕು ಹರಿದಿರುತ್ತಿದ್ದಿಲ್ಲ. ಬೆಳಕಾಗುವ ತನಕ ನನ್ನೊಡನೆ ಅವರು ನಡೆಯುತ್ತಿದ್ದರು. ಅನಂತರ ನಾನು ಶಾಲೆಕಡೆಗೆ ನಡೆಯುತ್ತಿದ್ದೆ ;ಅವರು ಮನೆಯ ಕಡೆಗೆ.

        ಕೆಲವೊಮ್ಮೆ ಮಳೆಗಾಲದಲ್ಲಿ ದಾರಿಯಲ್ಲಿ ಮಳೆಗೆ ಸಿಲುಕಿ ನೆನೆದುಕೊಂಡು ಬರುತ್ತಿದ್ದೆ. ಅಮ್ಮ ತಲೆಯನ್ನು ಮೈಯನ್ನು ಒರೆಸಿ ಅಪ್ಪಿ ಬೆಚ್ಚಗೆ ಮಾಡುತ್ತಿದ್ದಳು. 

        ನಾನು ಅಮ್ಮನೊಡನೆ ಜಗಳವಾಡುತ್ತಿದ್ದೆ ಆಟವಾಡುತ್ತಿದ್ದೆ. ಅಮ್ಮ ಕೆಲಸ ಹೇಳಿದಾಗ ಕೆಲವು ಸಲ ಮಾಡುತ್ತಿದ್ದೆ.

    ಅಮ್ಮ ಮೊನ್ನೆ ಮನೆಗೆ ಬಂದಿದ್ದಳು. ರೂಪಕ್ಕ ಮುರಳಿ ಜೊತೆಗೆ. ಇಂತಹ ನೆನಪುಗಳು ಮೇಲೆದ್ದು ಬಂದವು. ನನ್ನ ಸಾಧನೆಗಳನ್ನು ಅಮ್ಮನಿಗೆ ತೋರಿಸ ಬೇಕೆನಿಸಿತು. ನಾನು ಬರೆದ ಪುಸ್ತಕಗಳನ್ನೆಲ್ಲ ಒಂದೊಂದಾಗಿ ತೋರಿಸಿ ನನ್ನ ಆಸ್ತಿಯ ಹರವನ್ನು ಬಿಚ್ಚಿಟ್ಟೆ. ಖಶಿ ಪಟ್ಟಳು. ಆಶೀರ್ವದಿಸಿದಳು. ಅಮ್ಮ ಮತ್ತಷ್ಡು ಸಾಧನೆಗೆ ಆಶಿರ್ವಾದಿಸಿ ಮುನ್ನಡೆಸುತ್ತಿದ್ದಾಳೆ.

ನಮ್ಮ ರಾಮಚಂದ್ರಸ್ವಾಮಿಗಳು

ನಮ್ಮ ರಾಮಚಂದ್ರಸ್ವಾಮಿಗಳು

                                    ನಾನು ಕೊಪ್ಪದಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿದನಂತರ (1966) ಶೃಂಗೇರಿಯ ಶ್ರೀ ಜೆಸಿಬಿಎಮ್ ಕಾಲೇಜಿನಲ್ಲಿ ಪಿಯುಸಿಗೆ ನನ್ನನ್ನು ಸೇರಿಸಿದರು. ಆಗ ಕೆ ಬಿ ರಾಮಕೃಷ್ಣರಾವ್ ಎಂಬ ವಿದ್ವಾಂಸರು ಅಲ್ಲಿ ಪ್ರಿನ್ಸಿಪಾಲರಾಗಿದ್ದರು. ದೇಜಗೌ ಅವರು ಒಂದು ಸಭೆಯಲ್ಲಿ ನಮ್ಮ ಪ್ರಿನ್ಸಿಪಾಲರ ವಿದ್ವತ್ತನ್ನು ಹೊಗಳಿ ದೀಪದ ಕೆಳಗೆ ಕತ್ತಲೆ ಇದ್ದು ಅವರ ಪಾಂಡಿತ್ಯವನ್ನು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶೃಂಗೇರಿ ನೋಡಿರುವುದಕ್ಕಿಂತ ಹೆಚ್ಚು ರಾಜ್ಯದ ಇತರೆಡೆಗಳಲ್ಲಿ ಗುರುತಿಸಲಾಗಿದೆಯೆಂದು ಸೂಚಿಸಿದ್ದರು. ಅನಂತರ ಕೆಬಿಆರ್ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಹಿಂದೂ ದರ್ಶನಶಾಸ್ತ್ರದ ಪ್ರೊಫೆಸರರಾಗಿದ್ದರು. ಪ್ರಧಾನ ಗುರುದತ್ತ ಇವರು ಆಗ ನಮಗೆ ಕನ್ನಡದ ಪ್ರಾಧ್ಯಾಪಕರಾಗಿದ್ದರು.ಒಳ್ಳೆಯ ಸ್ಫೂರ್ತಿದಾಯಕ ಪಾಠವನ್ನು ಅವರಿಂದ ಕೇಳಬೇಕು . ನಮಗೆ ಇವರೆಲ್ಲ ಸ್ಫೂರ್ತಿ ತುಂಬಿದವರು.
                                    ನಮಗೆ ರಾಮಚಂದ್ರ ಸ್ವಾಮಿಗಳು ಕೆಮಿಸ್ಟ್ರಿ ಪ್ರಾಧ್ಯಾಪಕರು ಇವರು ನಮ್ಮ ವ್ಯಕ್ತಿತ್ವವನ್ನೇ ಕಟ್ಟಿ ನಮ್ಮನ್ನು ಬೆಳೆಸಿದವರು. ಮನೆಗೆ ಹೋದಾಗಲೆಲ್ಲ ತಿಂಡಿ ತೀರ್ಥಗಳೂ ಇರುತ್ತಿದ್ದವು. ಒಮ್ಮೊಮ್ಮೆ ಉಠವೂ ಇರುತ್ತಿತ್ತು. ಆದರೆ ಇದನ್ನೆಲ್ಲ ಮೀರಿದ್ದು ಅವರ ಪ್ರೀತಿ ಮತ್ತು ಬೌದ್ಧಿಕ ಆಹಾರ. ನನಗೆ ಗೀತೋಪನಿಷತ್ತುಗಳ ಬಗ್ಗೆ ಅಭಿಮಾನ ಮೂಡಿಸಿದ್ದು ರಾಮಚಂದ್ರಸ್ವಾಮಿಗಳು. ರಾಮಕೃಷ್ಣಾಶ್ರಮದ ಬಗ್ಗೆ ವಿವೇಕಾನಂದರ ಬಗ್ಗೆ ತಿಳಿವಳಿಕೆ ಮೂಡಿಸಿದ್ದು,ಪ್ರೀತಿ ಬೆಳೆಸಿದ್ದು ಇವರೇ. ಕಲಾತ್ಮಕವಾಗಿ ಅಕ್ಷರಗಳನ್ನು ಬರೆಯಲು ಕಲಿಸಿದವರು ಇವರು. ರಸಾಯನ ಶಾಸ್ತ್ರ ಪ್ರಯೋಗಗಳನ್ನು ಮಾಡುವಾಗ ವಹಿಸ ಬೇಕಾದ ಎಚ್ಚರ ಚಚ್ಚರಗಳನ್ನು ಮೂಡಿಸಿದವರು ಇವರು. ಸಾಹಿತ್ಯಾಭಿಮಾನವನ್ನು ಬೆಳೆಸಿದವರೂ ಇವರೇ. ಎಮ್‌ ಎ ಅಧ್ಯಯನ ಮಾಡುತ್ತಿದ್ದಾಗ ನಮ್ಮ ಪ್ರೊಫೆಸರರ ಬಗ್ಗೆ ವಿಶೇಷ ಗೌರವದ ಮಾತುಗಳನ್ನಾಡಿ ಅವರ ಮಾರ್ಗದರ್ಶನವನ್ನು ಘನತರವಾಗಿ ಪಡೆದು ಅನುಸರಿಸಿದಂತೆ ಮಾಡಿವರೂ ಇವರೇ. 
                            ಕಾಲೇಜಿನಲ್ಲಿ ಕೆಮಿಸ್ಟರಿ ಕಲಿಸಿ ಮನೆಗೆ ಹೋಗಿ ಆರಾಮ ಮಾಡುತ್ತಿದ್ದವರಲ್ಲ ಅವರು. ಮಲೆನಾಡಿನ ಮಣ್ಣಿನ ವಿಶೇಷತೆಗಳನ್ನು ಅಧ್ಯಯನ ಮಾಡಿ ಪ್ರಕಟಿಸಿದವರೂ ಹೌದು.
                            ಎಲ್ಲ ರೀತಿಯಿಂದಲೂ ನಮಗೆ ಆದರ್ಶಪ್ರಾಯರಾದವರು, ಕೆಮಿಸ್ಟ್ರಿ ಅಧ್ಯಯನ ಮುಂದುವರೆಸಲು ನಿಗದಿತ ಅರ್ಹತೆ ಹೊಂದಲಾಗದಾ ನಾನು ಸಾಹಿತ್ಯ ಅಧ್ಯಯನ ಮಾಡುವಂತೆ ಪ್ರೋತ್ಸಾಹಿಸಿದವರು ಅವರು. ನನಗೆ ಅವರೆಂದಿಗೂ ಮರೆಯಲಾಗದ ಮಾಶ್ಟ್ರು.

ಪ್ರಭಾವಗಳು




‌                                           ಪ್ರಭಾವಗಳು

ನಾವು ಯಾರುಯಾರಿಂದ ಹೇಗೆ ಪ್ರಭಾವಿತಾಗುತ್ತೇವೆ ಎಂಭುದೊಂದು ವಿಚಿತ್ರ. ಈದಿನ ನೋಡಿ. ನಾವು ಅಂದರೆ ನಾನು ಮತ್ತು ಇವಳು ಒಂದು ಊಟದ ಮನೆಗೆ ಹೋಗಿದ್ದೆವು. ಸಂದರ್ಭವೇನೂ ಸಂಭ್ರಮ ಪಡುವಂತಹುದಲ್ಲ ಬಿಡಿ. ಇವಳ ದೊಡ್ಡಪ್ಪನ ಸೊಸೆಯ ಮೃತ ವರ್ಷಾಂತಿಕ. ಅಂತೂ ಸಂಬಂಧಿಗಳನೇಕರ ಭೇಟಿಯಾಯಿತು.ಕುಶಲೋಪರಿಗಳು ವಿನಿಮಯವಾಯಿತು. ಸಂಭ್ರಮವಲ್ಲದಿದ್ದರೂ ಸಂತೋಷದ ಅಲೆ ಮನಸಿನಲ್ಲಿ ಬಂದುದು ಸುಳ್ಳಲ್ಲ. ಸಂಜೆ ಏಳು ಗಂಟೆಯಾಗಿರಬಹುದು.
ನಾವು ವಾಸವಾಗಿರುವುದು ಒಂದು ಫ್ಲಾಟಿನಲ್ಲಿ. ಅದೂ ನೆಲಸಮಕಟ್ಟಿನಲ್ಲಿ. ಇದು ನಲವತ್ತು ಫ್ಲಾಟುಗಳಿರುವ ಅಪಾರ್ಟ್ಮೆಂಟಾಗಿದ್ದು ನಮ್ಮ ಮನೆಯ ಮೇಲುಗಡೆ ಮೊದಲನೆಯ ಮಹಡಿಯಲ್ಲಿಯೂ ಒಂದು ಮನೆ ಇದೆ. ಅವರದು ಎರಡು ಮಕ್ಕಳು ಅವರ ತಂದೆ ತಾಯಿ, ಮಕ್ಕಳ ಅಜ್ಜಿ ಇರುವ ಕುಟುಂಬ. ಮನೆಯಲ್ಲಿದ್ದಷ್ಟೂ ಹೊತ್ತು ಮಕ್ಕಳು ಕುಣಿದಾಡುವುದು ಫುಟ್‌ ಬಾಲ್‌ ಆಡುವುದು ವಸ್ತುಗಳನ್ನು ಬೀಳಿಸುವುದು, ವಸ್ತುಗಳನ್ನು ಎಳೆದಾಡುವುದು ನಡೆಸಿಯೇ ಇರುತ್ತಾರೆ. ಇಂದು ನನಗೂ ನನ್ನವಳಿಗೂ ವಾದ ಉಂಟಾದುದು ಈ ಕಾರಣಕ್ಕಾಗಿ. ನಮಗೆ ಪರಿಹರಿಸಿಕೊಳ್ಳಲು ಸಾಧ್ಯವಾದುದನ್ನು ಸಹಿಸಬೇಕು ಅಷ್ಟೆ ಎಂಬುದು ನನ್ನ ವಾದ; ಹಾಗಲ್ಲ ನಾವು ಅವರ ಮನೆಗೆ ಹೋಗಿ ನಮಗೆ ತೊಂದರೆಯಾಗುತ್ತಿದೆ ಹಾಗಾಗದಂತೆ ನಡೆದುಕೊಳ್ಳುವುದು ಮಕ್ಕಳಿಗೆ ಬುದ್ಧಿ ಹೇಳಿ ಸರಿದಾರಿಗೆ ತರುವುದೂ ಅವರ ಜವಾಬ್ದಾರಿ ಎಂದು ಅವರಿಗೆ ಹೇಳ ಬೇಕೆಂಬುದೂ ಇವಳ ನಿಲುವು. ಪದೇ ಪದೇ ಈ ವಾದವನ್ನು ನನ್ನ ತಲೆಯೊಳಗೆ ತುರುಕಲು ಅವಳು ಇನ್ನಿಲ್ಲದ ಪ್ರಯತ್ನ ಮಾಡತೊಡಗಿದಾಗ ಈ ಕೂಡಲೇ ಹೋಗಿ ಅವರೊಡನೆ ಜಗಳ ಮಾಡಿಬರೋಣವೆನ್ನುವಷ್ಟು ಉತ್ತೇಜಿತನಾದೆ.
ಪ್ರಭಾವ ಹೇಗೆ ಉಂಟಾಗುತ್ತದೆ ನೋಡಿ. ವರ ಮನೆಗೆ ಇಬ್ಬರೂ ಹೋದೆವು ಆದರೆ ಜಗಳಾಡಲಿಲ್ಲ. ಮಕ್ಕಳಿಗೆ ಒಂದೊಂದು ಗಿಫ್ಟ್‌ ಕೊಟ್ಟು ಸ್ವಲ್ಪ ಬುದ್ಧಿ ಹೇಳಿ ಮನೆಯವರಿಗೂ ಸಲಹೆ ಕೊಟ್ಟು ಬಂದೆವು. ಕಡೆಗೆ ನೋಡಿದರೆ ಪುನರಾಯನಮಃ ಕಪಿಃ. 
ತಡೆದುಕೊಳ್ಳುವುದೊಂದೇ ದಾರಿ.

Tuesday 16 July 2019

ಹೊನಲು ತಾಣದಲ್ಲಿ ಪ್ರಕಟಿತ ಕವಿತೆ "ಎಲ್ಲ ತೀರಗಳ ದಾಟಿ"


ವೆಂಕಟೇಶ ಚಾಗಿ ಅವರ ಈ ಕವಿತೆಯನ್ನು ಈ ದಿನ ಹೊನಲು ತಾಣದಲ್ಲಿ ನಾನೋದಿದೆ. ಒಂದು ರೀತಿಯ ಮೌನಕ್ಕೆ ಶರಣಾದೆ.


ಕವಿತೆ: ಎಲ್ಲ ತೀರಗಳ ದಾಟಿ



ಹೊರಡು, leave, travel, ಪಯಣ
ಎಲ್ಲ ತೀರಗಳ ದಾಟಿ
ಹೊರಟಿರುವೆ ಎಲ್ಲಿಗೆ
ಎಲ್ಲಿಗೋ ನಿನ್ನ ಪಯಣ
ಎಲ್ಲ ಕನಸುಗಳ
ಕಾಣದೂರಿನ ಕಡೆಗೆ
ಮುಗಿಯಿತೇ ನಿನ್ನ ವಚನ
ಬಿಂದುವಿಂದಲಿ ಬೆಳೆದು
ನೋವು ನಲಿವಲಿ ಬೆಂದು
ಮರೆಸಿತೇ ಎಲ್ಲ ಆ ಕಾಲ
ಕಟ್ಟಿ ಇಟ್ಟಿರುವ ಬುತ್ತಿ
ಎಶ್ಟು ದಿವಸದ ಸ್ವತ್ತು?
ತೀರಿತೇ ಕೊನೆಯ ಸಾಲ
ಹಂಗು ರಂಗಿನ ಬದುಕು
ಪಡೆದ ಪುಣ್ಯನು ನೀನು
ಗಳಿಸಿ ಉಳಿಸಿದುದೇನು
ಕವನ ಮುಗಿದ ಮೇಲೆ
ಅವನ ಕಾಣದ ತವಕ
ಎಲ್ಲ ಗಮನಿದೆ ಆ ಬಾನು
ಇಂದ್ರಿಯಾತಿಂದ್ರೀಯ
ನೂರು ಮಾತಿನ ದಾರಿ
ಹಗಲಿರುಳು ನಡೆಯುವುದೇ
ಬಾನು ಅತೀ ಬಾಗಿದರೂ
ದರೆಯ ಚುಂಬಿಸುವುದೆಂತು
ಬೇಡಿಕೆಗೆ ಮತ್ತೆ ಮರಳುವುದೇ
ನೀನಲ್ಲ ನಾನಲ್ಲ ಅವನಲ್ಲ
ಜಗದೊಡೆಯ ಜಗದಲಿಲ್ಲ
ನಾವಿರುವುದೊಡೆಯನೊಳಗೆ
ಅಂಗ ಬೇದವ ತೊರೆದು
ಸಂಗ ಬಂಗವ ಮರೆತು
ಲೀನವಾಗಲಿ ಈಗ ವಚನಗೊಳಗೆ
(ಚಿತ್ರ ಸೆಲೆ: pxhere.com)

Sunday 15 January 2017

ನನ್ನ ಪಿಎಚ್ ಡಿ ಮೌಲ್ಯಮಾಪನ ವರದಿಗಳು.


                ನನ್ನ ಪಿಎಚ್ ಡಿ ಮೌಲ್ಯಮಾಪನ ವರದಿಗಳು.


                   ಈಗ ಹೇಗೋ ಗೊತ್ತಿಲ್ಲ. ನಾನು ಪಿಎಚ್ ಡಿ ಪೂರ್ಣಗೊಳಿಸಿದ ಸಂದರ್ಭದಲ್ಲಿಪುಸ್ತಕ ಪ್ರಕಾಶನಕ್ಕೆ ಅನುಮತಿ ಕೇಳಿದಾಗ ಮೌಲ್ಯಮಾಪನ ವರದಿಗಳನ್ನೂ ಮೈಸೂರು ವಿಶ್ವ ವಿದ್ಯಾಲಯದವರು ನನಗೆ ನೀಡಿದರು. ಒಬ್ಬರು ಮೌಲ್ಯಮಾಪಕರಂತೂ ನನ್ನ ಮಾ್ಗದರ್ಶಕರಾಗಿದ್ದ ಡಾ ಎಡ್ವರ್ಡ್ ನೊರೋನಾ ಅವರೇ. ಹೊರಗಿನ ವಿಶ್ವವಿದ್ಯಾಲಯಗಳಿಂದ ಇನ್ನಿಬ್ಬರು ಕನ್ನಡದ ಖ್ಯಾತ ನಾಮರು: ಒಬ್ಬರು ಹಂಪನಾ ಮತ್ತು ಇನ್ನೊಬ್ಬರು ಪಾ ಶ ಶ್ರೀನಿವಾಸ (ಮದ್ರಾಸು ವಿಶ್ವವಿದ್ಯಾಲಯ).
                       
                     ನೊರೋನಾ ಇವರು ನನಗೆ ಪರಿಶ್ರಮದ ಪ್ರಾಮುಖ್ಯವನ್ನೂ, ಪ್ರಬಂಧದಲ್ಲಿ ವಸ್ತುವನ್ನು ವ್ಯವಸ್ಥಿತವಾಗಿಡುವ ವಿಧಿವಿಧಾನಗಳನ್ನೂ, ಪದ-ವಾಕ್ಯ- ಅಕ್ಷರಗಳು ಹೆಚ್ಚುವರಿಯಾಗಿರದಂತೆ ನೋಡಿಕೊಂಡು ನಿರೂಪಣೆಯನ್ನು ಸಂಕ್ಷಿಪ್ತ ಮತ್ತು ನಿಖರವಾಗಿಸುವ ರೀತಿಗಳನ್ನೂ - ಇಂತಹ ಹಲವಾರು ವಿಷಯಗಳನ್ನು ತಿಳಿಸಿದವರು ಮತ್ತು ನನ್ನ ಕೆಲಸವನ್ನೂ ಮೆಚ್ಚಿಕೊಂಡವರು; ತಮ್ಮ ಅಂತಿಮ ವರದಿಯಲ್ಲಿ ಕೂಡ ಇಂತಹ ಮೆಚ್ಚುಗೆಯನ್ನು ಹರಿಸಿದವರು.

                      ಘಟಾನುಘಟಿಯಾದ ಹಂಪನಾ, ನನ್ನಂತಹ ಕಿರಿಯ ಆರಂಭಿಕನ ಬಗ್ಗೆ ಏನು ಹೇಳಿರಬಹುದೋ ಎಂಬ ಆತಂಕ ಕಾಡುತ್ತಲೇ ಇತ್ತು. ಓದಿದಾಗ ಅವರು ಬರೆಹ ಆಶ್ಚರ್ಯವನ್ನೇ ತಂದಿತ್ತು. ಅವರ ವರದಿಯಲ್ಲಿ ಹೀಗೆ ಬರೆದಿದ್ದಾರೆ: "ಕನ್ನಡ ಭಾಷಾ ಸಾಹಿತ್ಯದ ಸಂದರ್ಭದಲ್ಲಿ ಮಿಶನರಿಗಳ ಪರಿಶ್ರಮ ಮತ್ತು ಕೊಡುಗೆಯನ್ನು ಕೇಂದ್ರ ಪ್ರಜ್ಞೆಯಾಗಿರಿಸಿ ಬಿ ವಿ ಮಹೀದಾಸ ಅವರು ಈ ನಿಬಂಧವನ್ನು ಸಿದ್ಧಪಡಿಸಿದ್ದಾರೆ. ಇದು ಬಹು ಶ್ರಮ ಸಾಧ್ಯವಾದ ಕೆಲಸ. ನಿಬಂಧಕಾರರು ಪಟ್ಟಿರುವ ಪರಿಶ್ರಮದ ಅಗಾಧತೆಯನ್ನು ಈ ಗ್ರಂಥದುದ್ದಕ್ಕೂ ಸಾದ್ಯಂತವಾಗಿ ನೋಡಬಹುದು. ಶ್ರದ್ಧಾಪೂರ್ಣವಾದ ಈ ಕಾಯಕದಲ್ಲಿ ಶಾಸ್ತ್ರಶುದ್ಧಿಯೂ ಇದೆ. ಅಧ್ಯಾಯಗಳ ವಿಂಗಡಣೆ, ಆಯಾ ಅಧ್ಯಾದಲ್ಲಿ ಅಳವಡಿಸಿರುವ ವಿಷಯ ಮತ್ತು ವಿವೇಚನೆ, ಪೂರಕ ಸಾಮಗ್ರಿಯ ಪರಿಷ್ಕಾರ, ಮೂಲ ಆಕರಗಳ ಶೋಧನೆ ಮತ್ತು ಸಮೀಕ್ಷೆ -  ಈ ಎಲ್ಲ ಅಂಶಗಳಲ್ಲೂ ನಿಬಂಧಕಾರರ ಪ್ರಾಮಾಣಿಕತೆ, ಪರಿಶೀಲನಾಪ್ರಜ್ಞೆ, ವಸ್ತುನಿಷ್ಠ ಮತ್ತು ಕೃತಿನಿಷ್ಠ ಅಧ್ಯಯನ ವಿಧಾನಕ್ಕೆ ಬದ್ಧವಾದ ನಿಲುವು - ಇವು ಎದ್ದು ಕಾಣುತ್ತವೆ. ಎಲ್ಲೂ ಗೊಂದಲಗಳಿಗೆ ಅವಕಾಶವಿರದಂತೆ ಪ್ರತಿಯೊಂದು ಅಧ್ಯಾಯವೂ ಅಲ್ಲಲ್ಲಿ ಬರಬೇಕಾದ ಮಾಹಿತಿಗಳನ್ನು ಗರ್ಭೀಕರಿಸಿಕೊಂಡು ತನಗೆ ತಾನು ತನಿಯಾಗಿ ನಿಲ್ಲುವಷ್ಟು ಸಮರ್ಪಕವಾಗಿದೆ. ಒಂದು ಶಾಸ್ತ್ರಕೃತಿಗೆ ಇರಬೇಕಾದ ಅಚ್ಚುಕಟ್ಟಾದ ನಿರಲಂಕೃತ ಶೈಲಿಯಿಂದ ನಿಬಂಧ ಸಂತೋಷ ಕೊಡುತ್ತದೆ. ಕ್ರೈಸ್ತ ಮಿಶನರಿಗಳು, ಎರಡು ಶತಮಾನದ ಕಾಲಘಟ್ಟದಲ್ಲಿ, ಕನ್ನಡ ಭಾಷೆಗೂ ಸಾಹಿತ್ಯಕ್ಕೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಎಷ್ಟೆಷ್ಟು ಬಗೆಯಲ್ಲಿ ಮತ್ತು ಕ್ಷೇತ್ರಗಳಲ್ಲಿ ಮಹದುಪಕರಿಸಿದ್ದಾರೆಂಬುದನ್ನು ಬಿಂಬಿಸಲು ಈ ನಿಬಂಧ ದಿವ್ಯಮಣಿದರ್ಪಣವಾಗಿ ನಿಲ್ಲುತ್ತದೆ. ಒಂದು ನವೀನ ಶೈಕ್ಷಣಿಕ ಶಿಸ್ತನ್ನೂ, ಹೊಸ ಪರಿಭಾಷೆಯನ್ನೂ, ಮುಖ್ಯವಾಗಿ ಹಳಗನ್ನಡ ಕೃತಿಗಳ ಅನುಸಂಧಾನ ಕ್ರಮವನ್ನು ಸುವ್ಯವಸ್ಥಿತವಾಗಿ ಸಂಯೋಜಿಸಿ ಮುಂದೆ ಬರೆಯಬೇಕಾಗಿದ್ದ ಸಾಹಿತ್ಯಚರಿತ್ರಗೆ ತಕ್ಕ ಭೂಮಿಕೆಯನ್ನು ಸಿದ್ಧಪಡಿಸಿಕೊಟ್ಟವರು ಕ್ರೈಸ್ತಮಿಶನರಿಗಳೆಂಬುದನ್ನು ಈ ನಿಬಂಧವು ಘನತರವಾಗಿ ಖಚಿತಪಡಿಸಿದೆ. ಇದು, ವಿದ್ವತ್ಕಾರ್ಯ ತಾಳ್ಮೆಯ ಹಾಗೂ ನಿರಂತರ ದುಡಿಮೆಯ ಸಾರವಾಗಿ ಬಂದಿರುವ ನಿಬಂಧ. ನಿಜಕ್ಕೂ ಶಬ್ದದ ಪೂರ್ಣಾರ್ಥದಲ್ಲಿ ಇದು ಉತ್ತಮ ಮಟ್ಟದ 'ಸಂಶೋಧನ' ಗ್ರಂಥ".
                      ಸನ್ಮಾನ್ಯರ ಈ ಮಾತಗಳು ನನಗೂ ನನ್ನ ಮಾರ್ಗದರ್ಶಕರಾದ ನೊರೋನಾರಿಗೂ ಹೊಗಳಿಕೆಯ ಉಡುಗೊರೆಗಳೇ ಸರಿ!. ನನ್ನ ನಿಬಂಧದಲ್ಲಿ ಹಂಪನಾ ಇವರು ಹೇಳಿದ ಗುಣಗಳೆಲ್ಲ ಸೇರುವಂತೆ ಮಾಡಿದವರು ನೊರೋನಾ ಇವರಲ್ಲದೆ ಬೇರಾರು? ಹೀಗೆ ಸಮನ್ವಯಗೊಳಿಸಿ ಇಬ್ಬರನ್ನೂ ಉತ್ತಮ ಕೆಲಸಕ್ಕೆ ಪ್ರೇರಿಸುವ ಕಲಾಗಾರಿಕೆಯನ್ನು ಕಂಡು ಬೆರಗಾಗುತ್ತದೆ. ನನ್ನಂತೂ ನಾಗರಾಜಯ್ಯನವರ ಮಾತುಗಳು ಇಂದಿಗೂ ಉಬ್ಬಿಸುತ್ತವೆ. ಶೈಕ್ಷಣಿಕ ಆಡಳಿತದ ನಡುವೆ ಶಿಕ್ಷಣ ಮತ್ತು ಶಾಸ್ತ್ರ ಸಾಹಿತ್ಯದಲ್ಲಿ ಅಲ್ಪವಾದರೂ ಕೃಷಿ ಮಾಡಲು ಪ್ರೇರಿಸಿದವು ಇಂತಹ ಮಾತುಗಳೇ!.

                      ಪಾ ಶ ಶ್ರೀನಿವಾಸರು ನನ್ನ ನಿಬಂಧವನ್ನು ವಿವರವಾಗಿ ಪರಿಶೀಲಿಸಿ ದಾಖಲಿಸಿದ್ದಾರೆ. ಗುಣಾವಗುಣಗಳನ್ನು ಚರ್ಚಿಸಿದ್ದಾರೆ. "ಪಾಶ್ಚಾತ್ಯ ಮಿಶನರಿಗಳ ಕೆಲಸವನ್ನು ಪರಿಚಯ ಮಾಡಿಕೊಡುವ ಹಲವಾರು ಗ್ರಂಥಗಳು ರಚನೆಯಾಗಿದ್ದರೂ ವರ್ಣನಾತ್ಮಕ ಮತ್ತು ಚಾರಿತ್ರಿಕ ದೃಷ್ಟಿಯಿಂದ, ವಸ್ತುನಿಷ್ಠವಾಗಿ ಇಷ್ಟೊಂದು ವಿವರವಾಗಿ ಪರಿಚಯಿಸುವ ಕೃತಿ ಹೊರಬಂದಿರುವುದು ಇದೇ ಮೊದಲು. ಅದರಲ್ಲೂ ಶಾಸ್ತ್ರ ಕೃತಿಗಳ ರಚನೆಯಲ್ಲಿ ಅವರು ತೋರಿರುವ ಅನುಪಮ ಕೌಶಲವನ್ನೂ, ಪ್ರಾಯೋಗಿಕ ವಿಮರ್ಶೆಯ ರೂಪದಲ್ಲಿ [ಬಿಡಿಸಿಬಿಡಿಸಿ] ಪರಿಚಯಿಸಿರುವ, ನಿಬಂಧಕಾರರ ಶ್ರಮದಿಂದ ಕೂಡಿದ ಈ ಕಾರ್ಯ ಶ್ಲಘನೀಯವಾಗಿದೆ. ಇಷ್ಟೊಂದು ದೀರ್ಘವಾದ, ವಿಸ್ತಾರವಾದ, ನಿಬಂಧದಲ್ಲಿಹೆಚ್ಚಾಗಿ, ಬೆರಳಚ್ಚಿನ ದೋಷಗಳಾಗಲೀ ಪದವಾಕ್ಯ ದೋಷಗಳಾಗಲೀ ನುಸುಳದಿರುವುದು ಮೆಚ್ಚತಕ್ಕ ಅಂಶ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

                         ಈ ಮೂರೂ ಮಹನೀಯರುಗಳು ನನ್ನ ಸಾಹಿತ್ಯಾಭಿವ್ಯಕ್ತಿಗೆ ಪ್ರೇರಣೆ ನೀಡಿದವು; ಅಭಿವ್ಯಕ್ತಿಯನ್ನು ಮೊನಚುಗೊಳಿಸಿದವು; ಅನಾವಶ್ಯಕ ಪದಗಳಿಲ್ಲದಂತೆ ಅರ್ಥಪೂರ್ಣ ಬರಹಕ್ಕೆ ನನ್ನನ್ನು ನೂಕಿದವು. ಈ ವಿಚಾರಗಳಲ್ಲಿ ನನಗೆ ವ್ಯಕ್ತಿತ್ವವೊಂದು ಒದಗಿ ಬಂದುದು ಇವರಿಂದಿಲೇ ಅಲ್ಲವೇ?

                      

Tuesday 15 March 2016

ಹೊಟ್ಟುಕುಟ್ಟುವ ಆಟ

                                        
                                             ಹೊಟ್ಟುಕುಟ್ಟುವ  ಆಟ


ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದೆ ಎಂಬ ಗುಲ್ಲು ಏರಿ ಅನೇಕರು ಅಸಹಿಷ್ಣುತೆ ಇದೆ, ಇಲ್ಲ; ಅದಕ್ಕೆ ಕಾರಣ ಅದು, ಇದು; ಇದನ್ನು ಹೋಗಲಾಡಿಸಲು ಸರಕಾರ ಕ್ರಮ ಕೈಗೊಳ್ಳಬೇಕು; ಕೈಗೊಳ್ಳುತ್ತಿಲ್ಲ, ಅದಕ್ಕಾಗಿ ಹೋರಾಟ ಮಾಡಬೇಕು ಎಂದೆಲ್ಲ ಚರ್ಚೆಗಳು ನಡೆಯುತ್ತಿವೆ. ಇಂತಹ ಚರ್ಚೆಗಳಲ್ಲಿ ಭಾಗೀದಾರರೊಬ್ಬರು ತರುಣ ಮಿತ್ರ ಗಿರೀಶಭಟ್ಟರು. ಅವರಲ್ಲಿ ನನ್ನ ಅನಿಸಿಕೆಗಳ ಅರಿಕೆ ಇಲ್ಲಿದೆ:

            ನನಗಂತೂ ಈ ಅಸಹಿಷ್ಣುತೆ ಚರ್ಚೆಗಳೆಲ್ಲ ಹೊಟ್ಟು ಕುಟ್ಟುವ ಅನುಭವ ಕೊಡುತ್ತವೆ. ನನಗೆ ಕಟ್ಟಾ ಸಂಪ್ರದಾಯಸ್ಥರಾದ ಮಸ್ಲಿಮರೂ ಕ್ರೈಸ್ತರೂ ಸ್ನೇಹಿತರಿದ್ದಾರೆ. ಅವರು ಐದು ಸಲ ನಮಾಜು ಮಾಡುವ ಮುಸ್ಲಿಮರು ಮತ್ತು ಪಾದ್ರಿತನದಲ್ಲಿರುವ ಕ್ರೈಸ್ತರು. ನಾನೂ ಕಟ್ಟಾ ಸಂಪ್ರದಾಯಸ್ಥ ಬ್ರಾಹ್ಮಣನೇ. ‘ವಾದಿ’ ಎನ್ನಲ್ಲ. ಏಕೆಂದರೆ ‘ಅದು ಅಲ್ಲಿಯೇ; ಇದು ಇಲ್ಲಿಯೇ’ ಎಂಬುದನ್ನು ನಾನು ಮನಸಾರೆ ಒಪ್ಪುವೆ.
            ಮಾಧ್ಯಮಗಳಲ್ಲಿ ಗದ್ದಲವೆಬ್ಬಿಸಿಕೊಂಡು ಈ ಬಗ್ಗೆ ಆಗುತ್ತಿರುವ ಚರ್ಚೆ, ಪ್ರಚಾರ, ವಾದಗಳೆಲ್ಲ ಶುದ್ಧ ರಾಜಕೀಯವೆಂದೇ ನನಗನ್ನಿಸುತ್ತದೆ. ಕನ್ನಯ್ಯ, ವೇಮುಲ – ಇವರಿಗೆಲ್ಲ ರಾಹುಲ್ ಗಾಂಧಿಯವರು ಆಯಾ ಸ್ಥಳಕ್ಕೇ ಹೋಗಿ ಸಾಂತ್ವನ ಹೇಳಿ ಬೆಂಬಲ ಸೂಚಿಸಿದರಷ್ಟೆ.ಈಗ ಕನ್ನಯ್ಯ ಕುಮಾರ ಹೇಳಿಕೆ ಕೊಡುತ್ತಾ ಹೋದಂತೆ ರಾಹುಲ್ ಗಾಂಧಿ ಬೆಂಬಲ ಕಾಣೆಯಾಗುತ್ತಿದೆಯಲ್ಲ? ಕನ್ನಯ್ಯ ಮಾಡಿದ್ದೂ ತಾನು ನಾಯಕನಾಗಬೇಕೆಂಬ ಹಪಿಹಪಿಯಿಂದ. ಅವನು ರಾಜಕೀಯ ನಾಯಕನ ಸ್ಥಾನಮಾನ ಗಳಿಸುತ್ತಿದ್ದಾನೆಂದು ಕಾಣುವ ಮೊದಲು ರಾಹುಲ್ ಬೆಂಬಲ. ಅಂತಹ ಸಾಧ್ಯತೆ ನಿಚ್ಚಳವಾಗುತ್ತಿದ್ದಂತೆ ನೋ ಬೆಂಬಲ. ಇಲ್ಲೆಲ್ಲ ರಾಜಕೀಯ ಸ್ವಾರ್ಥ ವಿಚಾರ ಧಾರೆಯ ಮುಖವಾಡ ಧರಿಸುತ್ತದೆ. ಆದ್ದರಿಂದಲೇ ಚುನಾವಣೆ ಬಂದಾಗ ಅಭಿವೃದ್ಧಿಯ ಐಡಿಯಾಗಳು, ಅಭಿವೃದ್ಧಿ ಸಾಧಿಸುವರೆಂಬ ವಿಶ್ವಾಸ ಮುಖ್ಯವಾಗುತ್ತವೆ. ಕೊನೆಯ ಪಕ್ಷ ಕಳೆದ ಚುನಾವಣೆಯಲ್ಲಿ ಹಾಗಾಗಿದೆ.

             ಮಾರ್ಕ್ಸ್-ವಾದವೆಂಬ ಮರೀಚಿಕೆಯ ಬೆನ್ನು ಹತ್ತಿದ ರಾಷ್ಟ್ರಗಳು ಉದುರಿರುವುದು ಇತಿಹಾಸ. ಚೀಣಾದ  ಮಾವೋವಾದ ಕೂಡ ಮಾರ್ಕ್ಸ್-ವಾದದ ಒಂದು ರೂಪವಾಗಿದ್ದು ಪುನರುತ್ಥಾನ ಅನುಭವಿಸಿ ಮೊದಲಿನ ತೀವ್ರತೆಯಿಂದ ದೂರವಾಗಿದೆಯೆಂದೆನಿಸುತ್ತದೆ. ತಾವೇನೋ ಶ್ರಮಿಕರ ಹಿತ ಕಾಯುವ ವಿಶ್ವವಾದಿಗಳೆಂದುಕೊಳ್ಳುವ ಈ ವಾದದ ಮೂರು ಅವತರಣಿಕೆಗಳು ನಮ್ಮ ದೇಶದಲ್ಲಿವೆ. ಮೂರು ಅವತರಣಿಕೆಗಳು ನಾಯಕಕೇಂದ್ರಿತವಾಗಿ ಹಟ್ಟಿಕೊಂಡವು ತಾನೆ. ಇದಕ್ಕೆ ವಿರೋಧವಾಗಿ ಎಲ್ಲರ ಹಿತದ ಮೂಲಕ ರಾಷ್ಟ್ರಹಿತಕ್ಕೆ ಬದ್ಧವಾಗಿರುವುದು ಬಿಜೆಪಿ. ಕೆಲವೊಮ್ಮೆ ಇದೆ ನಾಯಕರು ತಾವು ಇಂದೂ ವಾದಿಗಳೆಂದು ಘೋಷಿಸಿಕೊಂಡರೂ ಹಿಂದೂ ಎಂಬುದರ ವ್ಯಾಖ್ಯೆಗೆ ತೊಡಗಿದಾಗ ಇವರುಗಳು ನೀಡುವ ವಿವರಣೆ ಈ ದೇಶದಲ್ಲಿರುವ ೆಲ್ಲರೂ ಎಂಬುದೇ. ಈ ಎರಡು ಪಕ್ಷಗಳ ನಡುವೆ ಅಸಹಿಷ್ಣುತೆ ಸಹಜವೇ. ಏಕೆಂದರೆ ಅದು ಒಂದು ವರ್ಗVsಎಲ್ಲರು. ಭಾರತದಲ್ಲಿರುವ ಇನ್ನೊಂದಷ್ಟು ಪಕ್ಷಗಳು ವಂಶಾಧಾರಿತ. ನಿಜವಾಗಿ ಇಲ್ಲದ ಅಸಹಿಷ್ಣುತೆ ಹುಟ್ಟುಹಾಕುವವರು ಇವರೇ. ಇವರ ವಂಶಕುಡಿಗಳು ಅಧಿಕಾರ ಹಿಡಿಯುವುದಷ್ಟೆ ಇವರಿಗೆ ಬೇಕಾದ್ದು. ಆದ್ದರಿಂದಲೇ ಅಸಹಿಷ್ಣುತೆ ಒಂದು ರಾಜಕೀಯ ಪ್ರಚಾರ – ಈಗ ಅಧಿಕಾರದಲ್ಲಿರುವರ ಬಗ್ಗೆ ಜನರಲ್ಲಿ ಅಸಹನೆ ಉಂಟಾಗುವಂತೆ ಮಾಡಲು. ಇದಕ್ಕಿಂತ ಹೆಚ್ಚು ಪ್ರಾಶಸ್ತ್ಯವನ್ನು ಇದಕ್ಕೆ ನೀಡುವ ಅಗತ್ಯವಿಲ್ಲವೆಂದು ನನ್ನ ಭಾವನೆ.